ಜಾತಿ ಸಮೀಕ್ಷೆ ಬಂದ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ:ಬೋವಿ ಸಂಘದ ಅಧ್ಯಕ್ಷ ಆನಂದ್
1 min read
ಗುಡಿಬಂಡೆ : ರಾಜ್ಯ ಸರ್ಕಾರದ ವತಿಯಿಂದ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಒಳಮೀಸಲಾತಿಯ ಸೌಲಭ್ಯಗಳನ್ನು ಪಡೆಯಲು ಬೋವಿ ಸಮುದಾಯದವರು ತಮ್ಮ ಜಾತಿಯನ್ನು ಭೋವಿ ಎಂದು, ಉಪಜಾತಿಯನ್ನು ವಡ್ಡರು ಎಂದು ನಮೂದಿಸಬೇಕು. ಸಮೀಕ್ಷೆ ಮಾಡಲು ಬಂದ ಅಧಿಕಾರಿಗಳಿಗೆ ನಿಖರವಾದ ಮಾಹಿತಿಯನ್ನು ನೀಡಬೇಕೆಂದು ತಾಲೂಕು ಬೋವಿ ಸಂಘದ ಅಧ್ಯಕ್ಷ ಆನಂದ್ ಸಮುದಾಯದವರಲ್ಲಿ ಮನವಿ ಮಾಡಿದರು.
ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಭೋವಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಭೋವಿ ಸಮುದಾಯವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಸಮಾಜದಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ಕಾಣುವ ಪರಿಸ್ಥಿತಿ ಇದೆ. ಇಂತಹ ಸಂಕಷ್ಟದಲ್ಲಿರುವ ನಮ್ಮ ಸಮುದಾಯವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿಯ ಸೌಲಭ್ಯಗಳನ್ನು ಪಡೆಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಜಾತಿ ಗಣತಿ ಸಮೀಕ್ಷೆಯು ನಮಗೆ ಸಹಕಾರಿಯಾಗಲಿದೆ ಎಂದರು.
ಇನ್ನೂ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ 101 ಕ್ಕೂ ಹೆಚ್ಚು ಉಪಜಾತಿಗಳಿವೆ. ಒಳಮೀಸಲಾತಿ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಲಾಗಿತ್ತು. ಈ ಆಯೋಗವು ಈಗಾಗಲೇ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಜಾತಿ ಗಣತಿ ಸಮೀಕ್ಷೆಗಾಗಿ ಶಿಕ್ಷಕರು ಮನೆಗೆ ಭೇಟಿ ನೀಡಿದಾಗ, ಅವರಿಗೆ ನಿಖರವಾದ ಮಾಹಿತಿಯನ್ನು ನೀಡಬೇಕು. ಬೇರೆ ಊರುಗಳಿಗೆ ಕೆಲಸದ ನಿಮಿತ್ತ ತೆರಳಿರುವ ಸಮುದಾಯದವರಿಗೆ ಜಾತಿ ಗಣತಿ ಸಮೀಕ್ಷೆಯ ಮಹತ್ವವನ್ನು ತಿಳಿಸಿ, ಅವರನ್ನು ಮರಳಿ ತಮ್ಮ ಗ್ರಾಮಗಳಿಗೆ ಕರೆಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮೀಕ್ಷೆಯ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಭೋವಿ ಮತ್ತು ಉಪಜಾತಿಯನ್ನು ವಡ್ಡರು ಎಂದೇ ನಮೂದಿಸಬೇಕು. ಅಲ್ಲದೆ, ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳೂ ಸಹ ಯಾವುದೇ ಮನೆಯನ್ನು ಬಿಡದೇ ಜಾತಿ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದರು. ಈ ವೇಳೆ ತಾಲೂಕು ಭೋವಿ ಸಂಘದ ಮುಖಂಡರಾದ ಅಶ್ವತ್ಥಪ್ಪ, ರಾಘವೇಂದ್ರ, ಮಾದೇಶ, ರಮೇಶ್, ಅಶ್ವತ್ಥಪ್ಪ, ಗಂಗಾಧರಪ್ಪ ಸೇರಿದಂತೆ ಹಲವರಿದ್ದರು.
ವರದಿ ಸತೀಶ್ ಬಾಬು ಎ
