ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ ಪಾಪಿ

ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ಉಗ್ರರಿಗೆ ಆಹಾರ ಹಾಗೂ ಸೂರಿನ ವ್ಯವಸ್ಥೆ ಮಾಡಿದ್ದ ಪಾಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಮ್ತಿಯಾಜ್ ಅಹ್ಮದ್ ಮಗ್ರೆ ಎಂಬಾತ ಉಗ್ರರ ಅಡಗುತಾಣವನ್ನು ತೋರಿಸಲು ಪೊಲೀಸ್ ಮತ್ತು ಸೇನೆಯನ್ನು ಮುನ್ನಡೆಸುತ್ತಿದ್ದಾಗ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವೆಶಾವ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ, ಕೇವಲ 5 ರಿಂದ 10 ಸಾವಿರಕ್ಕೆ ಪಾಕಿಸ್ತಾನದ ಐಎಸ್ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್ಐಗೆ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಎಲ್ಓಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ನಡುವೆಯೇ ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದೆ. ಈಗಾಗಲೇ ಸತತ 11ನೇ ದಿನವೊ ಕದನ ವಿರಾಮ ಉಲ್ಲಂಘಿಸಿದೆ. ಗಡಿಯುದ್ದಕ್ಕೂ ಭಾರತೀಯ ಸೇನಾ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸ್ತಿದೆ.ಈ ಹಿಂದೆ ಒಂದು ಅಥವಾ ಎರಡು ವಲಯಗಳಿಗೆ ಸೀಮಿತವಾಗಿದ್ದ ದಾಳಿ ಈಗ ಎಲ್ಒಸಿ ಉದ್ದಕ್ಕೂ ಏಕಕಾಲದಲ್ಲಿ ದಾಳಿ ನಡೆಸ್ತಿದೆ. ಸಿಂಧೂ ನೀರು ಒಪ್ಪಂದ ರದ್ದು ಸೇರಿ ಭಾರತ ಕೈಗೊಂಡ ರಾಜತಾಂತ್ರಿಕ ಹೊಡೆತಕ್ಕೆ ತತ್ತರಿಸಿರುವ ಪಾಕಿಸ್ತಾನ ಫೆಬ್ರವರಿ 2021ರಲ್ಲಿ ಆಗಿದ್ದ ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಗುಂಡಿನ ದಾಳಿ ನಡೆಸ್ತಿದೆ.
