ಜನಾಕ್ರೋಶಕ್ಕೆ ಯಾತ್ರೆಗೆ ಕಮಲ ಪಾಳಯ ಸಜ್ಜು..ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರ
1 min read
ಮೈಸೂರು : ಡೀಸೆಲ್-ಪೆಟ್ರೋಲ್, ಹಾಲು, ವಿದ್ಯುತ್ ಬಸ್, ಮೆಟ್ರೋ, ಬಿರು ಬಿಸಿಲಿಗಿಂತ ಬೆಲೆ ಏರಿಕೆ ಬಿಸಿಯಲ್ಲಿ ಜನ ಬಳಲಿ ಬೆಂಡಾಗಿದ್ದಾರೆ. ಈಗಾಗಲೇ ಜನಾಕ್ರೋಶವೂ ಜೋರಾಗಿದ್ದು ಈ ನಡುವೆ ಇದಕ್ಕೆ ಕಿಚ್ಚು ಹಚ್ಚಿಸುವಂತೆ ಕಾಂಗ್ರೆಸ್ ವಿರುದ್ಧ ಕಮಲ ನಾಯಕರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಮುಸ್ಲಿಂ ಗುತ್ತಿಗೆದಾರ ಮೀಸಲಾತಿ, ದಲಿತರ ಹಣ ಲೂಟಿ, ರೈತರ ಕಡೆಗಣನೆಯನ್ನೇ ಕೈಗೆತ್ತಿಕೊಂಡ ನಾಯಕರು ಇಂದಿನಿಂದ ಜನಾಕ್ರೋಶ ಯಾತ್ರೆ ಆರಂಭಿಸಿದ್ದಾರೆ.ಮೈಸೂರಿನಲ್ಲಿ ಜನಾಕ್ರೋಶಕ್ಕೆ ಯಾತ್ರೆಗೆ ಕಮಲ ಪಾಳಯ ಸಜ್ಜಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಹೋರಾಟಕ್ಕೆ ತಂತ್ರ ಹೆಣೆಯಲಾಗಿದೆ. ಇಂದು ಮೈಸೂರು ಮತ್ತು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಲಿದ್ದು ಜಿಲ್ಲಾ ಕೇಂದ್ರದಲ್ಲಿ ಒಂದೆರಡು ಕಿಲೋ ಮೀಟರ್ ಪಾದಯಾತ್ರೆ ನಡೆಸಿ, ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಈ ಹೋರಾಟದಲ್ಲಿ ಪ್ರತಿ ದಿನ ಎರಡು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಒಂದೆಡೆ ಗ್ಯಾರಂಟಿ ಕೊಟ್ಟು ಇನ್ನೊಂದೆಡೆ ಬೆಲೆ ಏರಿಕೆ ಮೂಲಕ ಜನರಿಗೆ ಬರೆ ಹಾಕ್ತಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜನಾಕ್ರೋಶ ಯಾತ್ರೆ ರೂಪಿಸಿದೆ. ನಿನ್ನೆಯಷ್ಟೇ ವಿಪಕ್ಷ ನಾಯಕ ಆರ್.ಅಶೋಕ್ ಜನಾಕ್ರೋಶ ಯಾತ್ರೆಯ ಲೋಗೋ ಬಿಡುಗಡೆ ಮಾಡಿದ್ರು.. ನಾಲ್ಕು ಹಂತದಲ್ಲಿ ಈ ಹೋರಾಟ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಒಂದು ಜಿಲ್ಲೆಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಇನ್ನೊಂದು ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ. ಒಟ್ಟಾರೆ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡಲು ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದೆ. ಆದ್ರೆ ಈ ಜನಾಕ್ರೋಶ ಕೇವಲ ಫೋಟೋಗಳಿಗಷ್ಟೇ ಸಿಮೀತವಾಗದೇ ಜನರ ನೈಜ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸುತ್ತಾ? ಈ ಜನಾಕ್ರೋಶ ಯಾತ್ರೆಯಿಂದ ಸರ್ಕಾರ ದರ ಏರಿಕೆಯ ನೀತಿಯಲ್ಲಿ ಸಡಿಲ ಮಾಡುತ್ತಾ ಕಾದು ನೋಡಬೇಕಾಗಿದೆ.
