c24kannada

ವಸ್ತುಸ್ಥಿತಿಯತ್ತ

ಸಾಯಿ ಲೇಔಟ್‌ಗೆ ಭೇಟಿ ಕೊಟ್ಟ ಸಿಎಂ ಸಿದ್ದರಾಮಯ್ಯ ಮೇಲೆ ಸಾರ್ವಜನಿಕರ ಆಕ್ರೋಶ.. ಹಗ್ಗ ಹಾಕಿ ಪೊಲೀಸರ ರಕ್ಷಣೆ

ಬೆಂಗಳೂರು : ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಸಾಯಿ ಲೇಔಟ್‌ ಸೇರಿದಂತೆ ಕೆಲವು ಪ್ರದೇಶಗಳು ಮುಳುಗಡೆ ಆಗಿವೆ. ಮಳೆ ನೀರಿನಿಂದ ಹಾನಿಗೊಳಗಾದ ಸಾಯಿ ಲೇಔಟ್‌ಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಿಟಿ ರೌಂಡ್ಸ್‌ಗೆ ಬಂದ ಸಿಎಂ ಹಾಗೂ ಸಚಿವರ ಮೇಲೆ ಸಾಯಿ ಲೇಔಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಿ ಮಳೆಯಿಂದ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿ. ದೂರದಿಂದ ನೋಡಿದ್ರೆ ನಿಮಗೆ ಏನು ಗೊತ್ತಾಗುತ್ತೆ? ಎಂದು ಸ್ಥಳೀಯ ಮಹಿಳೆಯರು ಸಿಎಂಗೆ ಆಗ್ರಹಿಸಿದರು.ಸಾಯಿ ಲೇಔಟ್ ಗೆ ಸಂಬಂಧಿಸಿದ ಬೃಹತ್ ರಾಜ ಕಾಲುವೆಯನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಬಳಿ ಮಾಹಿತಿ ಪಡೆದರು.

ಸಾಯಿ ಲೇಔಟ್‌ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರ ಮನವಿ ಆಲಿಸಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಎಂದು ಸ್ಥಳೀಯರು ತಮ್ಮ ಕಷ್ಟಗಳನ್ನು ಸಿಎಂಗೆ ಮನವರಿಕೆ ಮಾಡಿದರು. ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್ ಕೂಡ ಸ್ಥಳೀಯರ ಮನವಿ ಆಲಿಸಿದರು. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರನ್ನ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಿಎಂ, ಡಿಸಿಎಂ, ಅಧಿಕಾರಿಗಳು ಬಸ್‌ನಲ್ಲಿ ತೆರಳಲು ಸಜ್ಜಾದರು. ಬೇಗ ಬಸ್ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಾಯಿ ಲೇಔಟ್‌ನಿಂದ ಹೊರಡಲು ಸಿಎಂ, ಸಚಿವರು ಸಜ್ಜಾಗುತ್ತಿದ್ದಂತೆ ಸ್ಥಳೀಯ ಮಹಿಳೆಯರು ತಡೆಯಲು ಯತ್ನಿಸಿದರು. ಕಷ್ಟ ಸುಖ ಕೇಳಲು ನೀವು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸ್ಥಳೀಯರನ್ನು ತಡೆದ ಪೋಲೀಸರು, ಹಗ್ಗ ಹಾಕಿ ಸಿಎಂ ಹಾಗೂ ಅಧಿಕಾರಿಗಳಿಗೆ ರಕ್ಷಣೆ ನೀಡಿದರು.

Leave a Reply

Your email address will not be published. Required fields are marked *

error: Content is protected !!