ಅಮಾಯಕರ ಜೀವದ ಜೊತೆ ನಕಲಿ ವೈದ್ಯನ ಚೆಲ್ಲಾಟ! 15 ಹಾರ್ಟ್ ಸರ್ಜರಿ.. 7 ಮಂದಿ ದಾರುಣ ಸಾವು
1 min read
ವೈದ್ಯನೆಂಬ ಜೀವಂತ ದೇವರು ಕಷ್ಟದಲ್ಲಿ ಕೈ ಹಿಡಿಯುವವರು ಎದುರು ನಿಂತಾಗ ಅವರಲ್ಲಿ ದೇವರು ಕಾಣುತ್ತಾರೆ. ಮಧ್ಯಪ್ರದೇಶದ ದಾಮೋಹ್ನಲ್ಲಿ ನಕಲಿ ವೈದ್ಯ ರೋಗಿಗಳ ಪಾಲಿಗೆ ದೆವ್ವ ಆಗಿದ್ದಾನೆ. 15 ಹಾರ್ಟ್ ಸರ್ಜರಿ ಮಾಡಿದ ನಕಲಿ ವೈದ್ಯನಿಂದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವನ ಬಲೆ ಬಿದ್ದ ಆಸ್ಪತ್ರೆಯವರು 7 ರೋಗಿಗಳ ಸಾವನ್ನು ಮುಚ್ಚಿಟ್ಟು ಮತ್ತೊಂದು ಯಡವಟ್ಟು ಮಾಡಿದ್ದಾರೆ. ಆರೋಪಿ ನರೇಂದ್ರ ವಿಕ್ರಮಾದಿತ್ಯ ಯಾದವ್. ತಾನು ಲಂಡನ್ನಲ್ಲಿ ತರಬೇತಿ ಪಡೆದಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ನಕಲಿ ವೈದ್ಯ ನರೇಂದ್ರ ಇಂಗ್ಲೆಂಡ್ನ ಪ್ರಸಿದ್ಧ ಡಾಕ್ಟರ್ ಜಾನ್ ಕಮ್ ಹೆಸರು ಹೇಳಿ ಎಲ್ಲರ ದಾರಿ ತಪ್ಪಿಸಿದ್ದಾನೆ.
ಇಂಗ್ಲೆಂಡ್ನ ಪ್ರಸಿದ್ಧ ವೈದ್ಯ ಜಾನ್ ಕಮ್ ಹೆಸರು ಹೇಳಿದ ನರೇಂದ್ರ 2025ರ ಜನವರಿಯಲ್ಲಿ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆ ಸೇರಿದ್ದ. ಜನವರಿಯಲ್ಲೇ 15 ಹಾರ್ಟ್ ಸರ್ಜರಿ ಮಾಡಿ 7 ಮಂದಿ ಸಾವನ್ನಪ್ಪುತ್ತಿದ್ದಂತೆ ಫೆಬ್ರವರಿ ತಿಂಗಳಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ.ಈ ನಕಲಿ ಡಾಕ್ಟರ್ ನರೇಂದ್ರನ ವಿಚಾರ ಲಂಡನ್ನಲ್ಲಿದ್ದ ನಿಜವಾದ ಡಾಕ್ಟರ್ ಜಾನ್ ಕಮ್ ಅವರಿಗೂ ಗೊತ್ತಾಗಿದೆ. ಕೂಡಲೇ ಡಾ. ಜಾನ್ ಕಾಮ್ ಅವರು ತನ್ನ ಹೆಸರಿನ ನಕಲಿ ವೈದ್ಯನ ಬಗ್ಗೆ ಎಚ್ಚರಿಸಿದ್ದಾರೆ. ಇದಾದ ಮೇಲೆ ನಕಲಿ ವೈದ್ಯನ ನಿಜವಾದ ಬಣ್ಣ ಬಯಲಾಗಿದೆ.
ಮಧ್ಯಪ್ರದೇಶದ ಜಿಲ್ಲಾ ವೈದ್ಯಾಧಿಕಾರಿಯು ಜಿಲ್ಲಾಧಿಕಾರಿ ಸುಧೀರ್ ಕೊಚ್ಚಾರ್ಗೆ ನಕಲಿ ವೈದ್ಯನ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಇಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಪ್ರಿಯಾಂಕ್ ಕಾಂಗೂರು ಅವರು ದಾಮೋಹ್ಗೆ ಭೇಟಿ ನೀಡಿ ತನಿಖೆ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ದಾಮೋಹ್ ಮಿಷನರಿ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಸ್ಕೀಮ್ ನಡಿ ಹಣ ಪಡೆದಿರುವುದು ಪತ್ತೆಯಾಗಿದೆ. ತೆಲಂಗಾಣ ರಾಜ್ಯದಲ್ಲೂ ನಕಲಿ ವೈದ್ಯ ನರೇಂದ್ರ ವಿಕ್ರಮಾದಿತ್ಯ ಯಾದವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
