ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ: ಗುಪ್ತ ಚೀಟಿ ಮತದಾನಕ್ಕೆ ವಿಜಯೇಂದ್ರ ವಿರೋಧಿ ಬಣದ ಕೂಗು
1 min read
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ರಣರೋಚಕ ಹಂತ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. 20 ವರ್ಷಗಳ ಬಳಿಕ ರಣ ರೋಚಕ ಅಖಾಡ ಏರ್ಪಟ್ಟರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಗುಪ್ತ ಚೀಟಿ ಮತದಾನಕ್ಕೆ ವಿಜಯೇಂದ್ರ ವಿರೋಧಿ ಬಣದಿಂದ ಪ್ರಸ್ತಾಪಕ್ಕೆ ಸಿದ್ಧತೆ ನಡೆದಿದೆ. ಹೈಕಮಾಂಡ್ ಮುಂದೆ ವಿರೋಧಿ ಬಣದಿಂದ ಪ್ರಸ್ತಾಪ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ಆದರೆ ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇಲ್ಲಿ ತನಕ ಬ್ಯಾಲೆಟ್ ಪೇಪರ್ ಮತದಾನ ಆಗಿಯೇ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಂದು ಸಲ ಗುಪ್ತ ಚೀಟಿ ಮತದಾನ ಆಗಿದ್ರೆ, ವಿರೋಧ ಪಕ್ಷದ ಸ್ಥಾನಕ್ಕೆ ಒಂದು ಸಲ ಗುಪ್ತ ಚೀಟಿ ಮತದಾನ ಆಗಿದೆ. ಈ ನಡುವೆ 1985 ರಲ್ಲಿ ಎ.ಕೆ.ಸುಬ್ಬಯ್ಯ ವರ್ಸಸ್ ಬಿ.ಬಿ.ಶಿವಪ್ಪ ನಡುವಿನ ಸ್ಪರ್ಧೆ, 2003 ರಲ್ಲಿ ಅನಂತ್ ಕುಮಾರ್ ವರ್ಸಸ್ ಯಡಿಯೂರಪ್ಪ ನಡುವಿನ ಸ್ಪರ್ಧೆಯಲ್ಲಿ ಅಭಿಪ್ರಾಯ ಸಂಗ್ರಹದ ಮೂಲಕ ಬಲಾಬಲ ನೋಡಿ ರಾಜ್ಯಾಧ್ಯಕ್ಷ ಹುದ್ದೆ ಘೋಷಣೆಯೂ ನಡೆದಿರುವ ಉದಾಹರಣೆಗಳು ಇವೆ. ಆದರೆ, ವಿಜಯೇಂದ್ರ ವಿರೋಧಿ ಬಣದ ಅಸ್ತ್ರಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪುವ ಸಾಧ್ಯತೆಯೂ ಕಮ್ಮಿ ಎನ್ನಲಾಗಿದ್ದು, ಅಂತಿಮ ತೀರ್ಮಾನ ಕುತೂಹಲ ಮೂಡಿಸಿದೆ. ಅಭಿಪ್ರಾಯ ಸಂಗ್ರಹದ ಮೂಲಕವೇ ರಾಜ್ಯಾಧ್ಯಕ್ಷರ ಘೋಷಣೆ ಮಾಡ್ತಾರಾ ಕಾದುನೋಡಬೇಕಿದೆ.
