May 23, 2026

c24kannada

ವಸ್ತುಸ್ಥಿತಿಯತ್ತ

ದೇವದಾಸಿ ಪದ್ಧತಿ ಇನ್ನೂ ಜೀವಂತ! ಕುಟುಂಬಸ್ಥರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿ ರಕ್ಷಣೆ

ಬಳ್ಳಾರಿ : ಕುಟುಂಬಸ್ಥರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿಯನ್ನು ರಕ್ಷಿಸಿರುವ ಪೊಲೀಸರು, ಆಕೆ ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ ಮಾಡಿಸಿದ್ದಾರೆ. ಯುವತಿ ತನ್ನದೇ ಯುವಕನನ್ನು ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ತಾಯಿ ಪ್ರೀತಿಯನ್ನು ವಿರೋಧಿಸಿ ದೇವದಾಸಿ ಆಗುವಂತೆ ನಿತ್ಯ ಒತ್ತಾಯಿಸುತ್ತಿದ್ದರು.  ಇದಕ್ಕೆ ಒಪ್ಪದ ಯುವತಿ ಪುನರ್ವಸತಿ ಕಲ್ಪಿತ ದೇವದಾಸಿಯರ ವಿಮೋಚನಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಚ್‌.ಯಂಕಮ್ಮ ಅವರನ್ನು ಸಂಪರ್ಕಿಸಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

 

ಕುರುಗೋಡು ಠಾಣೆಯ ಪಿಎಸ್‌ಐ ಸುಪ್ರಿತ್‌ ವಿರೂಪಾಕ್ಷಪ್ಪ ಅವರು ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿಯೇ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಲಾಗಿದೆ. ಈ ಕುರಿತು ಸುಪ್ರಿತ್ ವಿರೂಪಾಕ್ಷಪ್ಪ, ‘ದೇವದಾಸಿ ಪದ್ಧತಿಗೆ ದೂಡುವ ಪ್ರಕರಣ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ.

 

ಬಳ್ಳಾರಿ ಜಿಲ್ಲೆಯಲ್ಲಿಯೂ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಈ ಪದ್ಧತಿ 1982ರಲ್ಲಿ ನಿಷಿದ್ಧಗೊಂಡಿದ್ದರೂ, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇದು ಗುಪ್ತವಾಗಿ ಮುಂದುವರಿದಿದೆ.​ ಈ ಪದ್ಧತಿಯು ಸಾಮಾನ್ಯವಾಗಿ ದಲಿತ ಸಮುದಾಯದ ಯುವತಿಯರನ್ನು ದೇವರಿಗೆ ಅರ್ಪಿಸುವ ಮೂಲಕ ನಡೆಯುತ್ತದೆ. ಇದು ಬಹುಪಾಲು ಬಡತನ, ಅಶಿಕ್ಷಣ ಮತ್ತು ಅಂಧಶ್ರದ್ಧೆಗಳ ಪರಿಣಾಮವಾಗಿದೆ. ಕುರುಗೋಡು ಗ್ರಾಮದಲ್ಲಿ ಯುವತಿಯೊಬ್ಬಳು ದೇವದಾಸಿಯಾಗಿ ಅರ್ಪಣೆಯಾಗುವ ಅಪಾಯದಿಂದ ಪಾರಾಗಿ, ತನ್ನ ಪ್ರೀತಿಯ ವ್ಯಕ್ತಿಯನ್ನು ವಿವಾಹ ಮಾಡಿಕೊಂಡ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ದೇವದಾಸಿ ಮಹಿಳೆಯರ ಮುಕ್ತ ಸಂಘ ಸಹಾಯ ಮಾಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!