ಸಿಡಿಲಿನ ರೌದ್ರಾವತಾರಕ್ಕೆ ಒಂದೇ ದಿನ 7 ಮಂದಿ ಜೀವ ತೆಗೆದ ಬೆಳ್ಮಿಂಚು

1 min read
Share it

ಬೆಂಗಳೂರು:  ರಾಜ್ಯಾದ್ಯಂತ ವರುಣಾರಾಯ ಆರ್ಭಟಿಸಿ, ಬೊಬ್ಬಿರಿದಿದ್ದಾನೆ.  ಸಿಡಿಲು, ಗುಡುಗು, ಮಿಂಚಿನೊಡೆಗೆ ಸುರಿದ ಜೋರು ಮಳೆಯಾಗಿ ಸಾಕಷ್ಟು ಹಾನಿಯಾಗಿದೆ. ಮಳೆಯ ನರ್ತನ ಜೊತೆಗೆ  ಸಿಡಿಲಿನ ರೌದ್ರಾವತಾರಕ್ಕೆ  ಕೊಪ್ಪಳದಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಮೂವರು, ವಿಜಯಪುರ ಹಾಗೂ ಚಿಕ್ಕಮಗಳೂರಲ್ಲಿ  ಒಬ್ಬೊಬ್ಬರು ಜೀವ ಕಳೆದುಕೊಂಡಿದ್ದಾರೆ.

 

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರದಲ್ಲಿ ಸಿಡಿಲು ಬಡಿದು ರೈತ ಜೀವ ಬಿಟ್ಟಿದ್ದಾರೆ. ಮೈಲಾಪುರ ಗ್ರಾಮದ ಬಸನಗೌಡ (39) ಪ್ರಾಣ ಕಳೆದುಕೊಂಡ ರೈತ. ಭತ್ತವನ್ನು‌ ಕಟಾವು ಮಾಡಿ ಒಣಗಿಸಲು ಹಾಕಿದ್ದರು. ಈ ವೇಳೆ ಜೋರು ಮಳೆ ಬಂದಿದ್ದರಿಂದ ಭತ್ತವನ್ನು ಉಳಿಸಿಕೊಳ್ಳಲು ಹೋಗಿದ್ದಾಗ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಘಟನೆ ನಡೆದಿದ್ದು ಹೊಲಕ್ಕೆ ಹತ್ತುಗಳನ್ನು ಕರೆದುಕೊಂಡು ಹೋಗಿದ್ದ ರೈತ ಜೀವ ಬಿಟ್ಟಿದ್ದಾನೆ. ಇನ್ನು ಬೆಲೆ ಬಾಳುವ ಎತ್ತುಗಳು ಕೂಡ ಮೃತಪಟ್ಟಿವೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಯಂಕಪ್ಪ ಜಾಡಿ (45) ಮೃತಪಟ್ಟಿದ್ದಾರೆ.

 

 

ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರ ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ರಾರಾವಿ ಗ್ರಾಮದ ಭೀರಪ್ಪ (45), ಸುನೀಲ್ (26) ಹಾಗೂ ವಿನೋದ್ (14) ಮೃತ ದುರ್ದೈವಿಗಳು. ಇವರು ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಆಗ ಸಿಡಿಲು ಬಡಿದಿದ್ದರಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ತಂಗಡಗಿ ಗ್ರಾಮದ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ಜೀವ ಕಳೆದುಕೊಂಡವರು. ಹಸು ಮೇಯಿಸಲು ಹೊರ ಹೋಗಿದ್ದರು. ಈ ವೇಳೆ ಜೋರು ಸುರಿದ ಮಳೆಯಿಂದಾಗಿ ಆಶ್ರಯ ಪಡೆಯಲು ಹುಣಸೆ ಮರದ ಕೆಳಗೆ ನಿಂತಿದ್ದರು. ಆದರೆ ಸಿಡಿಲಿಗೆ ಬಲಿಯಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

ಕಾಫಿನಾಡಲ್ಲಿ ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಕುರಿಗಾಯಿ ಒಬ್ಬರು ಜೀವ ಬಿಟ್ಟಿದ್ದಾರೆ. ಗೆದ್ಲೆಹಳ್ಳಿಯ ಲೋಕೇಶಪ್ಪ (48) ಮೃತ ದುರ್ದೈವಿ. ಜಮೀನಿನಲ್ಲಿ ಕುರಿ ಕಾಯುವಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?