ಭಾರತ-ಪಾಕ್ ಯುದ್ದದಲ್ಲಿ ಗೋರಂಟ್ಲು ಯೋಧ ವೀರಮರಣ- ಇಂದು ಮಧ್ಯಾಹ್ನ ಬೆಂಗಳೂರು ತಲುಪಲಿದೆ ಪಾರ್ಥಿವ ಶರೀರ
1 min read
ಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಸರ್ಕಾರ ಉಗ್ರರ ಮೇಲೆ ಆಪರೇಷನ್ ಸಿಂಧೂರ್ ನಡೆಸಿತು. ಇದರಿಂದ ಕೆರಳಿದ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆಯಲ್ಲಿ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧನೊಬ್ಬ ವೀರ ಮರಣವನ್ನಪ್ಪಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮೃತನ ಪಾರ್ಥೀವ ಶರೀರ ಇಂದು ಗ್ರಾಮಕ್ಕೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ದಾಳಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರ ಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಏಕೈಕ ಪುತ್ರ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹುತಾತ್ಮ ಮುರಳಿ ನಾಯಕ್ ಮನೆಗೆ ಆಂಧ್ರ ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದ್ದಾರೆ. ಭಾರತ ಮಾತೆಯ ವೀರಪುತ್ರ ಮುರಳಿ ನಾಯಕ್ ಹೆಸರು ಸೂರ್ಯ-ಚಂದ್ರರಿರುವ ತನಕವೂ ಇರುತ್ತದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮುರಳಿ ನಾಯಕ್ ಕುಟುಂಬದ ಜೊತೆ ಆಂಧ್ರ ಸರ್ಕಾರ ನಿಲ್ಲುತ್ತದೆ ಎಂದರು. ಮುಖ್ಯಮಂತ್ರಿ ಚಂದ್ರ ಬಾಬುನಾಯ್ಡು ಸಹ ಸಂತ್ರಸ್ತ ಕುಟುಂಬಕ್ಕೆ ಕರೆ ಮಾಡಿ ಸಂತೈಸಿದ್ದಾರೆ. ಯೋಧನ ಪಾರ್ಥೀವ ಶರೀರ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ಚಿಕ್ಕಬಳ್ಳಾಪುರ ಮಾರ್ಗವಾಗಿಯೇ ಮೃತರ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ.
