ಭೀಕರ ಭೂಕಂಪಕ್ಕೆ ಥೈಲ್ಯಾಂಡ್ ವಿಲ ವಿಲ! ಹಲವಾರು ಕಟ್ಟಡಗಳು ಧರೆಗೆ, ಜನಜೀವನ ಅಸ್ತವ್ಯಸ್ತ!
1 min read
ಇದು ಘನಘೋರ, ಪ್ರವಾಸಿಗರ ಸ್ವರ್ಗದಲ್ಲಿ ಪ್ರಕೃತಿ ಮಾತೆ ಮುನಿದ ಪರಿಣಾಮ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿದೆ. ರಣಭೀಕರ ಭೂಕಂಪಕ್ಕೆ ಸತ್ತವರ ಸಂಖ್ಯೆ 150 ದಾಟಿದೆ. 730ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.. ಭೂಕಂಪಪೀಡಿತ ಮಯನ್ಮಾರ್ಗೆ ಪ್ರಧಾನಿ ಮೋದಿ ನೆರವಿನ ಹಸ್ತ ಚಾಚಿದ್ದಾರೆ.. ಸದ್ಯ ಬ್ಯಾಂಕಾಕ್ನಲ್ಲಿ ಸಿಲುಕಿರುವ ಕನ್ನಡಿಗರು ಸೇಫ್ ಆಗಿದ್ದು ಇಂದು ತವರಿಗೆ ಆಗಮಿಸುವ ನಿರೀಕ್ಷೆ ಇದೆ.
ಅಬ್ಬಬ್ಬಾ. ಒಂದೊಂದು ದೃಶ್ಯಗಳ ಭೀಕರ. ಭಯಾನಕ. ಧರೆಗುರುಳಿದ ಗಗನ ಚುಂಬಿ ಕಟ್ಟಡಗಳು… ಜೀವ ಉಳಿಸಿಕೊಳ್ಳಲು ಹೊರ ಓಡೋಡಿ ಬಂದ ಜನರು.. ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಮಯನ್ಮಾರ್ ಹಾಗೂ ಥೈಲ್ಯಾಂಡ್ ಭೂಕಂಪನದಿಂದ ನರಕವಾಗಿದೆ. ಎಲ್ಲೆಲ್ಲೂ ಧರಶಾಹಿಗೊಂಡ ಕಟ್ಟಡದ ಅವಷೇಶಗಳ ಭೀಕರ ಭೂಕಂಪದ ಸಾಕ್ಷಿಗಳಾಗಿವೆ.. ನೆರೆಯ ಮಯನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳ ಶತಮಾನದ ದೊಡ್ಡ ಭೂಕಂಪಕ್ಕೆ ಪತರುಗುಟ್ಟಿವೆ. ಮಯನ್ಮಾರ್ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಮಯನ್ಮಾರ್ನ ಎರಡನೇ ಅತಿದೊಡ್ಡ ನಗರವಾದ ಮಾಂಡಲೇಯಲ್ಲಿ ಹಲವಾರು ಕಟ್ಟಡಗಳು ನೆಲ ಕಚ್ಚಿವೆ.. ಘಟನೆಯಲ್ಲಿ ಸಾವಿನ ಸಂಖ್ಯೆ 200 ದಾಟಿದೆ.. 732ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.. ಮಯನ್ಮಾರ್ನಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದಾರೆ.. ಚಿಕಿತ್ಸೆ ಭರದಿಂದ ಸಾಗಿದೆ.. ಭೂಕಂಪದ ಕೇಂದ್ರಬಿಂದು ಮಂಡಲೇ ನಗರದಿಂದ ಸುಮಾರು 17.2 ಕಿ.ಮೀ ದೂರದಲ್ಲಿದೆ.
ಇನ್ನು ನೆರೆಯ ಥೈಲ್ಯಾಂಡ್ನಲ್ಲೂ ಭೂಮಿ ಕಂಪಿಸಿದೆ, ರಾಜಧಾನಿ ಬ್ಯಾಂಕಾಂಕ್ನಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 30 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.. ಭೂಕಂಪದ ಬಳಿಕ ಎರಡೂ ರಾಷ್ಟ್ರಗಳಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಈ ದೃಶ್ಯ ನೋಡಿದ್ರೆ ಮೈ ನಡುಗಿಸುತ್ತೆ.. ನಿರ್ಮಾಣ ಹಂತದ ಗಗನಚುಂಬಿ ಕಟ್ಟಡದ ಟಾಪ್ ಫ್ಲೋರ್ನಲ್ಲಿ ಕಾಮಗಾರಿ ವೇಳೆಯೇ ಭೂಮಿ ಕಂಪಿಸಿದೆ. ಏಕಾಏಕಿ ಕಟ್ಟಡ ಕುಸಿದಿದೆ. ಕ್ರೇನ್ ಮೇಲೆ ಕುಳಿತಿದ್ದ ಆಪರೇಟರ್ ಮೇಲೆ ತರಗೆಲೆಯಂತೆ ಹಾರಿ ಕೆಳಕ್ಕೆ ಬೀಳುವ ದೃಶ್ಯ ಭಯಾನಕವಾಗಿದೆ. ಮತ್ತೊಂದೆಡೆ ಕುಸಿತ ಕಟ್ಟಡಗಳ ಅವಶೇಷಗಳ ನಡುವೆ ವ್ಯಕ್ತಿಯೊಬ್ಬ ರಕ್ಷಣೆಗಾಗಿ ಕೂಗುತ್ತಿರುವುದು ಮನಕಲಕುವಂತಿದೆ. ಇನ್ನೊಂದೆಡೆ ಮಯನ್ಮಾರ್ನ ಪಿನ್ಮನಾದಲ್ಲಿ ಭೂಕಂಪಕ್ಕೆ ರೈಲ್ವೇ ಹಳಿಗಳು ಹಾನಿಯಾಗಿವೆ. ಸದ್ಯ ರೈಲ್ವೇ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಾಂಡಲೇ ಬಳಿಯ ಮೈಥಾ ಎಂಬಲ್ಲಿ ಹೆದ್ದಾರಿಯೊಂದು ಬಾಯ್ತೆರೆದಿರೋ ದೃಶ್ಯವಂತೂ ಬೆಚ್ಚಿ ಬೀಳಿಸುವಂತಿದೆ.ಮಯನ್ಮಾರ್ ಹಾಗೂ ಥೈಲ್ಯಾಂಡ್ ಭೂಕಂಪ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ನೆರೆಯ ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.
ಭೂಕಂಪಪೀಡಿತ ಬ್ಯಾಂಕಾಕ್ನಲ್ಲಿ 42 ಮಂದಿ ಕನ್ನಡಿಗರು ಸೇರಿ 600 ಮಂದಿ ಸಿಲುಕಿರೋದು ವರದಿಯಾಗಿದೆ. ಕೆಲಸದ ನಿಮಿತ್ತ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 42 ಮಂದಿ ಕನ್ನಡಿಗರು ತೆರಳಿದ್ದು ಅನಂತಾರಾ ಹಾಗೂ ಅವನಿ ಹೋಟೆಲ್ಗಳಲ್ಲಿ ತಂಗಿದ್ದಾರೆ.. ಕನ್ನಡಿಗರು ತಂಗಿದ್ದ ಹೋಟೆಲ್ ಕೂಡ ಬಿರುಕು ಬಿಟ್ಟಿದ್ದು, ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನು ಬ್ಯಾಂಕಾಂಕ್ಗೆ ಟ್ರಿಪ್ ಹೋಗಿದ್ದ ಹಾವೇರಿ ಮೂಲದ ಐದು ಮಂದಿ ಸುರಕ್ಷಿತವಾಗಿದ್ದು, ಇಂದು ಬೆಂಗಳೂರಿಗೆ ವಾಪಸ್ ಆಗ್ತೀವಿ ಎಂದು ತಿಳಿಸಿದ್ದಾರೆ. ರಾತ್ರಿ 11.50ರ ಸುಮಾರಿಗೆ ಮ್ಯಾನ್ಮಾರ್ನಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲಾಗಿದೆ. ಪದೇ ಪದೇ ಭೂಮಿ ಕಂಪಿಸುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಅದೇನೇ ಇರಲಿ, ಪ್ರಕೃತಿಯ ಆಟದ ಮುಂದೆ ಮಾನವ ನೆಪ ಮಾತ್ರ, ಪ್ರವಾಸಿಗರ ನೆಚ್ಚಿನ ತಾಣದಲ್ಲಿ ಹೀಗಾಗಿರೋದು ನಿಜಕ್ಕೂ ಆಘಾತಕಾರಿ.
